Thursday 24 October 2013

ಲಹರಿ

ಸುಮ್ಮನೇ ಬಯಸಿದಾಕ್ಷಣ ದೊರೆಯಲು,
ಕವಿತ್ವವೇನು ಹಾದಿಬದಿಯ ತಿಂಡಿಯೇನು?

ಮನದ ದೆಣಪೆಯಲಿ ಚಿಮ್ಮಬೇಕು ಮೊದಲು,
ಭಾವಗಳ ಒರತೆ.
ಒತ್ತಿ ಬಂದ ಭಾವಬೀಜಗಳ,
ಮನದಂಗಳದಲಿ ಬಿತ್ತಿ,
ಅರಿವಿನ ಮಳೆಗರೆದು,
ಪದಗೊಂಚಲ ಗೊಬ್ಬರ ಹೂಡಿ,
ಬೆಳೆಸಬೇಕೊಂದು ಕವಿತೆಯ, ಅರೆರೆ!
ಇನ್ನೂ ಮುಗಿಯದಿದರ ಬೇಡಿಕೆ!
ಪ್ರಾಸಾನುಪ್ರಾಸಗಳ ಅಲಂಕಾರದ ಚಪ್ಪರ
ಆಸರೆಗಾಗಿ ಬೇಕಂತೆ, ಬಳುಕುವ ಬಳ್ಳಿ ಕವನಕ್ಕೆ!

ಇಷ್ಟೆಲ್ಲಾ ಬೆವರು ಸುರಿಸಿ, ಅಲ್ಲಲ್ಲ
ಪ್ರೀತಿ ಹರಿಸಿ, ಮನದಂಗಳದೊಳು ಜಾಗವಿತ್ತರೂ,
ಕವಿಗಳ ಕಷ್ಟ ತಪ್ಪದು.
ಬೆಳೆದ ಕವನ ಓದುವವನದಂತೆ!
ಹರಿಸಿದ ಪ್ರೀತಿ ಪಡೆದವನದಂತೆ!
ಕವಿಯೆನಿಸಿಕೊಂಡವ, ಭಾವಝರಿಯ ಹುಡುಕುತ್ತಾ,
ಮತ್ತೆ ಸುರಿಸಬೇಕು ಹನಿ ಹನಿ ಪ್ರೀತಿಯ,
ಬೆಳೆಸಬೇಕು ಮತ್ತೊಂದು ಕಾವ್ಯ ಹಂದರ.

ಸುಮ್ಮನೇ ಬರುವುದಿಲ್ಲ ಕವಿತ್ವ!
ಅದಕ್ಕೂ ಸಿದ್ಧಿಸಬೇಕು ಲೋಕಪ್ರೀತಿಯ ಋಷಿತ್ವ!

No comments:

Post a Comment