Tuesday 2 October 2012

ಪ್ರಾಮಾಣಿಕತೆಯ ಸಾಕಾರ ಮೂರ್ತಿ, ಚಿರಂತನ ಸ್ಫೂರ್ತಿ

ಆರು ವರ್ಷದ ಒಬ್ಬ ಹುಡುಗ ತನ್ನ ಗೆಳೆಯರೊಡನೆ ಶಾಲೆ ಮುಗಿಸಿ ಬರುತ್ತಾ ಒಂದು ತೋಟಕ್ಕೆ ಹೋಗುತ್ತಾನೆ. ಗೆಳೆಯರ ಗುಂಪು ತೋಟದಲ್ಲಿ ಹಣ್ಣನ್ನು ಕದಿಯಲು ಹೊಂಚು ಹಾಕಿ, ಮರವನ್ನು ಹತ್ತುತ್ತಾರೆ, ಈ ಹುಡುಗ ಕಾವಲಿಗೆ ನಿಲ್ಲುವವನಂತೆ ಕೆಳಗೆ ನಿಂತಿರುತ್ತಾನೆ. ಎಲ್ಲರೂ ಮಾವಿನ ಹಣ್ಣನ್ನು ಕೀಳುತ್ತಿರುವಾಗ, ತೋಟದ ಒಡೆಯ ಬಂದು ಕೆಳಗೆ ನಿಂತಿದ್ದ ಇವನನ್ನು ಹಿಡಿದು ಥಳಿಸಲು ಪ್ರಾರಂಭಿಸುತ್ತಾನೆ. ತಪ್ಪಿಸಿಕೊಳ್ಳುವ ದಾರಿ ಕಾಣದೆ ಆ ಹುಡುಗ, ತಾನೊಬ್ಬ ಅನಾಥನೆಂದೂ ಆದ್ದರಿಂದ ತನ್ನನ್ನು ಬಿಡಬೇಕೆಂದೂ ಬೇಡಿದಾಗ, ಆ ವ್ಯಕ್ತಿ "ನೀನು ಅನಾಥ ಆಗಿರೋದ್ರಿಂದ, ಎಲ್ಲಕ್ಕಿಂತ ಮುಖ್ಯ ಒಳ್ಳೆ ನಡತೆ ಕಲಿತುಕೊಬೇಕು" ಎಂದು ಹೇಳಿ ಆ ಹುಡುಗನನ್ನು ಬಿಡುತ್ತಾನೆ, ಇದು ಆ ಹುಡುಗನ ಮೇಲೆ ಎಷ್ಟು ಪರಿಣಾಮ ಬೀರುತ್ತದೆಂದರೆ, ಮುಂದೆಂದೂ ಅವನು ಸುಳ್ಳನ್ನು ಹೇಳುವಂತಹ ಕೆಲಸ ಮಾಡುವುದೇ ಇಲ್ಲ. ತನ್ನ ಒಳ್ಳೆಯ ಗುಣದಿಂದ ನೈತಿಕತೆಗೆ ಇನ್ನೊಂದು ಹೆಸರು ಎಂಬಂತೆ ಬಾಳುತ್ತಾನೆ.

ಆ ವ್ಯಕ್ತಿ ಯಾರೆಂದರೆ "Force will be met by Force" ಎಂದು ಶತ್ರು ಸೈನ್ಯಕ್ಕೆ ಸಾರಿ ಹೇಳಿದ, ಹೇಳಿದಂತೆ ಮಾಡಿ ತೋರಿಸಿ ಭಾರತೀಯರ ಶೌರ್ಯವನ್ನು ಎತ್ತಿ ಹಿಡಿದ ಪ್ರಥಮ ವ್ಯಕ್ತಿ. ಪ್ರಾಮಾಣಿಕತೆಯ ಸಾಕಾರ ಮೂರ್ತಿ. ಇವರು ಭಾರತ ಸರ್ಕಾರದಲ್ಲಿ ಗೃಹಮಂತ್ರಿಯಾಗಿದ್ದಾಗ Home less Home minister ಎಂದೇ ಕರೆಸಿಕೊಳ್ಳುತ್ತಿದ್ದರು. ಭಾರತ ಸರ್ಕಾರದ ಗೃಹಮಂತ್ರಿಯಾಗಿದ್ದರೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು, ಅವರೇ ಭಾರತ ರತ್ನ ಲಾಲ್ ಬಹದ್ದೂರ್ ಶಾಸ್ತ್ರಿ.

ಇವರ ಹೆಸರು ನೋಡಿದವರನೇಕರು ಇವರು ಶಾಸ್ತ್ರಿ ಮನೆತನಕ್ಕೆ ಸೇರಿದ ಬ್ರಾಹ್ಮಣರಿರಬೇಕೆಂದು ಭ್ರಮಿಸುತ್ತಾರೆ, ಆದರೆ ಶಾಸ್ತ್ರಿ ಎಂಬುದು ಕಾಶಿ ವಿದ್ಯಾ ಪೀಠದಿಂದ ಅವರಿಗೆ ಸಿಕ್ಕ ಒಂದು ಪದವಿಯಷ್ಟೇ. ಅದು ಈಗಿನ ಕಾಲದ ಬ್ಯಾಚಲರ್ಸ್ ಡಿಗ್ರೀಗೆ ಸಮನಾದ ಒಂದು ಪದವಿ. ಆದರೆ ಅವರ ಹೆಸರಿನೊಡನೆ ಅವಿನಾಭಾವವಾಗಿ ಸೇರಿ ಹೋಯಿತು. ಇವರ ಜನನ 02 October 1904 ರಂದು ಮುಘಲ್ ಸರೈ (Mughalsarai) ಎಂಬಲ್ಲಿ. ತಂದೆ ಶಾರದಾ ಪ್ರಸಾದ್, ತಾಯಿ ರಾಮ್ ದುಲಾರಿ ದೇವಿ.

ಒಬ್ಬ ನಾಯಕರಾಗಿ ಅವರು ತಮ್ಮ ಪಾಲಿನ ಕರ್ತವ್ಯವನ್ನು ಚ್ಯುತಿಯಿಲ್ಲದೆ ನಿಭಾಯಿಸುತ್ತಿದ್ದರು. ಜವಾಬ್ದಾರಿಗಳನ್ನು ತನ್ನ ಹೆಗಲಿಗೆ ತೆಗೆದುಕೊಳ್ಳುತ್ತಿದ್ದರು, ಅವರ ಸರಳತೆ, ದೂರದೃಷ್ಟಿ, ಪ್ರಾಮಾಣಿಕತೆ,  ಕರ್ತೃತ್ವ ಶಕ್ತಿ ಇವುಗಳಿಂದ ಅವರು ರಾಜಕೀಯವಾಗಿ ಮೇಲೇರುತ್ತಾ ಹೋದರು, ಆದರೆ ಒಂದು ಕ್ಷಣಕ್ಕೂ ತಮ್ಮ ಸ್ವಾರ್ಥದ ಬಗೆಗೆ ಯೋಚಿಸಿದವರಲ್ಲ.

ಅವರು ಜವಾಬ್ದಾರಿಗಳನ್ನು ತಮ್ಮ ಹೆಗಲಿಗೆ ತೆಗೆದುಕೊಳ್ಳುತ್ತಿದ್ದ ಪರಿಗೆ ಸಾಕ್ಷಿ ಈ ಘಟನೆಗಳು - ರೈಲ್ವೆ ಇಲಾಖೆ ಇವರ ಅಡಿಯಲ್ಲಿದ್ದಾಗ 1956 ರ ಸೆಪ್ಟೆಂಬರ್ ನಲ್ಲಿ ಮಹಬೂಬ್ ನಗರದಲ್ಲಿ ನಡೆದ, 112 ಜನರನ್ನು ಬಳಿ ಪಡೆದ ರೈಲ್ವೆ ಅಪಘಾತದ ನೈತಿಕ ಹೊಣೆ ಹೊತ್ತು ತಕ್ಷಣವೇ ರಾಜಿನಾಮೆ ನೀಡಿದ್ದರು, ಅದು ಸ್ವೀಕಾರವಾಗಲಿಲ್ಲ. ಮೂರು ತಿಂಗಳುಗಳ ನಂತರ ತಮಿಳು ನಾಡಿನ ಅರಿಯಲುರ್ ನಲ್ಲಿ 144 ಜನರ ಬಲಿ ಪಡೆದ ರೈಲು ಅಪಘಾತದ ನಂತರ ಅವರು ಮತ್ತೆ ಆ ಪದವಿಯಲ್ಲಿ ಮುಂದುವರೆಯಲಿಲ್ಲ. ಅವರ ರಾಜಿನಾಮೆ ಸ್ವೀಕರಿಸುವಾಗ ಪ್ರಧಾನಿಯಾಗಿದ್ದ ನೆಹರು ಸಂಸತ್ತಿನಲ್ಲಿ, "ಶಾಸ್ತ್ರೀಜಿಯವರ ರಾಜಿನಾಮೆ ರಾಜಕೀಯದಲ್ಲಿ ಮುಂದಿನ ಪೀಳಿಗೆಗೆ ಒಂದು ಮಾದರಿಯಾಗಿ ನಿಲ್ಲುವುದೆಂಬ ಒಂದೇ ಕಾರಣಕ್ಕೆ ಇದನ್ನು ಸ್ವೀಕರಿಸುತ್ತಿದ್ದೇನಷ್ಟೇ, ನಡೆದ ಅಪಘಾತಗಳಿಗೆ ಶಾಸ್ತ್ರೀಜಿಯವರು ಹೊಣೆಗಾರರೆಂದು ಅಲ್ಲ" ಎಂದು ಘೋಷಿಸಿದ್ದರು. ಮಾದರಿಯೇನೋ ನೆಲೆ ನಿಂತಿತು, ಆದರೆ ಇಂದಿನ ರಾಜಕಾರಣದಲ್ಲಿ ಯಾರು ಅದನ್ನು ಪಾಲಿಸುತ್ತಿದ್ದಾರೆ?

27 May 1964 - ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರು ಹೃದಯಾಘಾತದಿಂದ ಮರಣವನ್ನಪ್ಪಿದ ದಿನ. ರಾಷ್ಟ್ರೀಯ ಕಾಂಗ್ರೆಸ್ ದೃಷ್ಟಿಯಲ್ಲಿ ಪರ್ಯಾಯ ನಾಯಕನಾಗಿ ಕಂಡವರೇ ಶಾಸ್ತ್ರೀಜಿ. ಭಾರತದ ದ್ವಿತೀಯ ಪ್ರಧಾನಿಯಾಗಿ ಇವರು ಅಧಿಕಾರ ಸ್ವೀಕಾರ ಮಾಡಿದ ನಂತರ ಭಾರತದ ಚಿತ್ರಣವೇ ಬದಲಾಗುತ್ತಾ ಹೋಯಿತು.ಶ್ವೇತ ಕ್ರಾಂತಿಗೆ ಉತ್ತೇಜನ ಕೊಟ್ಟು ಅದರ ಹರಿಕಾರರೆನಿಸಿದರು. ಹಸಿರು ಕ್ರಾಂತಿಯ ಪ್ರಾರಂಭವೂ ಇವರ ಕಾಲದಲ್ಲೇ. ಪ್ರಧಾನಿಯಾಗಿ ಆರಿಸಿಬಂದ ಮೇಲೆ ಅವರ ಮೊದಲ ಭಾಷಣದಲ್ಲೇ ಅವರು ತಮ್ಮ ದೃಷ್ಟಿಯನ್ನು ಸ್ಪಷ್ಟಗೊಳಿಸಿದ್ದರು. "There comes a time in the life of every nation when it stands at the cross-roads of history and must choose which way to go. But for us there need be no difficulty or hesitation, no looking to right or left. Our way is straight and clear—the building up of a socialist democracy at home with freedom and prosperity for all, and the maintenance of world peace and friendship with all nations." ಎಂದು ಸಾರಿದ್ದರು. 

ಪ್ರಧಾನಿಗಳ ಮಕ್ಕಳಾಗಿದ್ದರೂ, ಅವರ ಮಕ್ಕಳು ಶಾಲೆಗೆ ಹೋಗಲು ಜಟಕಾವನ್ನು ಅವಲಂಬಿಸಿದ್ದರಂತೆ, ಒಮ್ಮೆ ತಿಂಗಳ ಅಂತ್ಯದಲ್ಲಿ ತುರ್ತಾಗಿ ಹಣದ ಅಗತ್ಯ ಬಂದಾಗ, ಭಾರತದ ಪ್ರಧಾನಿ ಕೈಲಿ ಹಣವಿಲ್ಲದೇ ಒದ್ದಾಡುತ್ತಿದ್ದರು. ಅವರ ಪತ್ನಿ ಹಣ ತಂದುಕೊಟ್ಟಾಗ ಆಕೆಗೆ ಅದು ಎಲ್ಲಿಂದ ಬಂತೆಂದು ಇವರು ಕೇಳುತ್ತಾರೆ, ಅವರ ತಿಂಗಳ ಸಂಬಳದಲ್ಲಿ ತಾನು ಹತ್ತು ರುಪಾಯಿ ಉಳಿತಾಯ ಮಾಡುತ್ತಿರುವುದಾಗಿ ಆಕೆ ಹೇಳಿದಾಗ, ಸರ್ಕಾರಕ್ಕೆ ಪತ್ರ ಬರೆದು ಇನ್ನು ಮುಂದೆ ತನಗೆ ಹತ್ತು ರುಪಾಯಿ ಸಂಬಳ ಕಡಿಮೆ ಕೊಡಬೇಕೆಂದು ಕೇಳಿಕೊಂಡಿದ್ದರು! ರೈಲ್ವೆ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿ, ಸರ್ಕಾರಿ ವಸತಿಯಿಂದ ಅವರು ಹೊರಬಂದಾಗ ಅಕ್ಷರಶಃ ಅನಿಕೇತನರಾಗಿದ್ದರು. ವಾಸ ಮಾಡಲು ಮನೆಯೇ ಇಲ್ಲದೇ ಒದ್ದಾಡಿದ್ದರು.

ಪ್ರಧಾನಿಯಾದಾಗ, ಅವರ ಅಧಿಕಾರಾವಧಿಯಲ್ಲಿ ಅನೇಕ ಸಂಕಷ್ಟಗಳು ಬಂದರೂ ಧೃತಿಗೆಡಲಿಲ್ಲ. ಮದ್ರಾಸಿನಲ್ಲಿ ಶುರುವಾಗಿದ್ದ ಹಿಂದಿ ವಿರೋಧಿ ಅಭಿಯಾನ, ಆಹಾರ ಕೊರತೆ, ನೆರೆ ರಾಷ್ಟ್ರಗಳ ದಾಳಿಯ ಭೀತಿ, ಕಾಶ್ಮೀರ ಸಮಸ್ಯೆ ಹೀಗೆ ಅನೇಕ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಿದರು. ಆಹಾರ ಕೊರತೆಯುಂಟಾಗಿದ್ದಾಗ ಶಾಸ್ತ್ರೀಜಿ, ಜನ ವಾರದಲ್ಲಿ ಒಂದು ದಿನ ತಮ್ಮ ಒಪ್ಪೊತ್ತಿನ ಊಟ ಬಿಟ್ಟರೆ ಕೊರತೆಯನ್ನು ಸರಿದೂಗಿಸುವುದು ಸಾಧ್ಯ ಎಂಬ ಕರೆ ನೀಡಿದರು, ಇಡೀ ದೇಶಕ್ಕೆ ದೇಶವೇ ಅವರ ಕರೆಗೆ ಸ್ಪಂದಿಸಿ, ಕರೆ ಬಿತ್ತರಗೊಂಡ ಸೋಮವಾರದಿಂದ ಆರಂಭಿಸಿ ಪ್ರತಿ ಸೋಮವಾರ ಒಪ್ಪೊತ್ತು ಊಟ ಕೈಬಿಟ್ಟಿತು. ಆ ಸಮಸ್ಯೆ ತನ್ನ ಪರಿಹಾರದ ಹಾದಿಯನ್ನು ಕಂಡುಕೊಂಡಿತ್ತು. ದೇಶದ ಜನತೆಗೆ ತಮ್ಮ ಪ್ರಧಾನಿಯ ಮೇಲೆ ಇದ್ದ ನಂಬಿಕೆಗೆ, ಆ ವ್ಯಕ್ತಿ ಜನರ ಹೃದಯ ತಲುಪಿದ್ದರೆನ್ನಲು ಇದಕ್ಕಿಂತ ನಿದರ್ಶನ ಬೇಕೇ? ಇದೇ ನಂಬಿಕೆ, ಇದೇ ರಾಷ್ಟ್ರದ ಜನತೆಗೆ ಇಂದಿನ ಪ್ರಧಾನಿಯ ಮೇಲೆ ಇರುವುದೇ ಎಂದು ಕೇಳಿಕೊಂಡರೆ ಬಹುಶಃ ಪ್ರಶ್ನೆಯೇ ವ್ಯಂಗ್ಯವಾಗಬಹುದೇನೋ.

ಇನ್ನು ಅವರು ಶತ್ರು ರಾಷ್ಟ್ರಗಳನ್ನು ಅವರು ನಿಭಾಯಿಸಿದ ರೀತಿ ಅದೂ ಅದ್ಭುತ. 1962ರಲ್ಲಿ ಚೀನಾ ಆಕ್ರಮಣ ಮಾಡಿದಾಗ, ನಮ್ಮ ಸೇನೆಗೆ ಆದೇಶ ನೀಡಲು "ಹಿಂದಿ - ಚೀನೀ ಭಾಯಿ ಭಾಯಿ" ಮಂತ್ರ ಜಪಿಸುತ್ತಿದ್ದ ಪ್ರಧಾನಿ ನೆಹರು ಮೀನ ಮೇಷ ಎಣಿಸುತ್ತಿದ್ದರು, ಪರಿಣಾಮ ಭಾರತ ತನ್ನ ಅಧೀನದಲ್ಲಿದ್ದ ಅನೇಕ ಭೂ ಪ್ರದೇಶವನ್ನು ಕಳೆದುಕೊಂಡಿತು. ಆದರೆ 1965ರಲ್ಲಿ ಚುಕ್ಕಾಣಿ ಹಿಡಿದ್ದವರು ಇಂತಹ ಅನರ್ಥಕ್ಕೆ ಆಸ್ಪದ ಕೊಡಲಿಲ್ಲ. ಅನೇಕ ಪ್ರಮುಖ ದೇಶಗಳನ್ನು ಸುತ್ತಿದರು, ಅಲ್ಲಿನ ನಾಯಕರಿಗೆ ಭಾರತದ ನಿಲುವನ್ನು ಸ್ಪಷ್ಟಪಡಿಸಿದರು. ನೆರೆ ರಾಷ್ಟ್ರ ಪಾಕಿಸ್ತಾನ ತನ್ನ ಕುಚೇಷ್ಟೆಗಳನ್ನು ಪ್ರಾರಂಭಿಸಿತ್ತು, 1965ರ ಮೇ - ಜೂನ್ ನಲ್ಲಿ ಗುಜರಾತ್ ರಾಜ್ಯದ ಕಛ್ಹ್ ಪ್ರಾಂತ್ಯದಲ್ಲಿ ಆಕ್ರಮಣ ಮಾಡಿತು, ಶಾಸ್ತ್ರೀಜಿ ಹಿಂದೆ ಮುಂದೆ ಯೋಚಿಸಲಿಲ್ಲ, ನಮ್ಮ ಸೈನ್ಯವನ್ನು ಅಲ್ಲಿಗೆ ಅಟ್ಟಿದರು. ಪಾಕಿಸ್ತಾನದ ಪ್ರಯತ್ನ ವಿಫಲವಾಯಿತು, ನಂತರ ಎರಡೂ ದೇಶಗಳೂ ಹೋರಾಟ ನಿಲ್ಲಿಸಲು ಒಂದು ಒಪ್ಪಂದಕ್ಕೆ ಬಂದರು. ಕಛ್ಹ್ ನಲ್ಲೇನೋ ಸರಿ ಹೋಯಿತು, ಆದರೆ ಇನ್ನೂ ಒಪ್ಪಂದದ ಶಾಯಿ ಆರುವ ಮೊದಲೇ ಪಾಕಿಸ್ತಾನ ಮತ್ತೆ ತನ್ನ ನಿಜರೂಪ ತೋರಿತು, ಕಾಶ್ಮೀರದಲ್ಲಿ ಮತ್ತೆ ಆಕ್ರಮಣ ಮಾಡಿದ್ದಲ್ಲದೇ, ಶಾಸ್ತ್ರೀಜಿ ಒಬ್ಬ ಹಿಂದೂ ಎಂದು ಬಿಂಬಿಸಿ ಭಾರತೀಯ ಮುಸ್ಲಿಮರನ್ನು ಅವರ ವಿರುದ್ಧ ಎತ್ತಿ ಕಟ್ಟುವ ಪ್ರಯತ್ನ ಮಾಡಿತು. ಒಂದು ಕಡೆ ಕಾಶ್ಮೀರದಲ್ಲಿ, ಇತ್ತ ಪೂರ್ವ ಪಾಕಿಸ್ತಾನದ (ಈಗಿನ ಬಾಂಗ್ಲಾದೇಶ) ಕಡೆಯಿಂದ ಒಟ್ಟಿಗೇ ಆಕ್ರಮಣವಾಗುವ ಸಾಧ್ಯತೆಯಿತ್ತು. ಅದೇ ಸಮಯದಲ್ಲಿ ಚೀನಾ ಇಲ್ಲದ ಆರೋಪ ಮಾಡುತ್ತಾ ಭಾರತಕ್ಕೆ ಬೆದರಿಕೆ ಹಾಕಲು ಪ್ರಾರಂಭಿಸಿತ್ತು, ಎಲ್ಲವನ್ನೂ ಶಾಸ್ತ್ರೀಜಿ ಉಕ್ಕಿನ ಗುಂಡಿಗೆ ತೋರಿ ನಿಭಾಯಿಸಿದರು. "Go Forward & Strike" ಎಂದು ಸೇನೆಯ ಕಮಾಂಡರ್ ಗೆ ಆದೇಶವಿತ್ತು ಅವನಿಗೆ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯ ಕೊಟ್ಟರು. "Force will be met by Force" ಎಂದು ಶತ್ರು ರಾಷ್ಟ್ರಕ್ಕೆ ಪ್ರತ್ಯುತ್ತರ ಕೊಟ್ಟರು.

ಆ ವರ್ಷದ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ನಿಂತು ಅವರು ಮಾಡಿದ ಭಾಷಣದಲ್ಲಿ  - "It does not matter if we are destroyed. We will fight to the last to maintain the high honor of the Indian nation and its flag." ಎಂದು ಘೋಷಿಸಿದ್ದರು. ಯಾರು ಏನೆಂದು ಭಾವಿಸಿದರೂ ಚಿಂತೆಯಿಲ್ಲ, ನಮ್ಮ ರಾಷ್ಟ್ರದ ಸಾರ್ವಭೌಮತ್ವಕ್ಕೆ ಧಕ್ಕೆ ಬರಲು ಕೊಡುವುದಿಲ್ಲ ಎಂದು ಗುಡುಗಿದ್ದರು. ಅಂತಹ ಧೀಮಂತ ನಾಯಕನನ್ನು ಕಂಡಿದ್ದ ದೇಶ, ಇಂದು ತನ್ನ ನಿಲುವನ್ನು ವಿಶ್ವಕ್ಕೆ ಸಾರಲು ಒಂದು ಧ್ವನಿಯಿಲ್ಲದೇ ಪರಿತಪಿಸುತ್ತಿರುವುದು ವಿಪರ್ಯಾಸವಲ್ಲವೇ? ಶತ್ರುಗಳಿಗೆ ಪ್ರತ್ಯುತ್ತರ ಕೊಡುವುದಿರಲಿ, ಮಾನವ ಹಕ್ಕು ಎಂಬ ಹೆಸರಿನಲ್ಲಿ ರಾಷ್ಟ್ರದ ಗೌರವಕ್ಕೆ ಧಕ್ಕೆಯುಂಟು ಮಾಡಿದ ಭಯೋತ್ಪಾದಕರಿಗೂ ರಕ್ಷಣೆ ಕೊಡುತ್ತಾ, ಅವರನ್ನು ಸಾಕುತ್ತಿದೆ ನಮ್ಮ ಸರ್ಕಾರ. ಮತಗಳ ಮೇಲೆ ಕಣ್ಣಿಟ್ಟು ಅವರನ್ನು ಶಿಕ್ಷಿಸದೆ, ಜನತೆಗೆ ನೆಪ ಹೇಳುತ್ತಾ ಕಾಲ ದೂಡುತ್ತಿದೆ.

ಶಾಸ್ತ್ರೀಜಿ ಕೇವಲ ರಾಷ್ಟ್ರದ ಜನತೆಗೆ ಹೇಳಿದುದಷ್ಟೇ ಅಲ್ಲ, ಚೀನಾ "ಭಾರತ ತನ್ನ ನೆಲದಲ್ಲಿ ಸೇನೆ ನಿಲ್ಲಿಸುತ್ತಿದೆ, ಅದು ತನ್ನ ಸೈನ್ಯ ಹಿಂತೆಗೆದುಕೊಳ್ಳಬೇಕು" ಎಂಬ ಸುಳ್ಳು ಆರೋಪವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾಡಿದಾಗ, ಅದಕ್ಕೆ ಪ್ರತ್ಯುತ್ತರ ಕೊಡಲು ಸ್ವಲ್ಪವೂ ತಡ ಮಾಡಿರಲಿಲ್ಲ, ಪರಿಸ್ಥಿತಿ ಬಹಳ ಸೂಕ್ಷ್ಮವಾಗಿತ್ತು, ಸೈನ್ಯ ಹಿಂತೆಗೆದು ಕೊಂಡರೆ ಚೀನಾದ ಆರೋಪ ಸತ್ಯವೆಂದು ಒಪ್ಪಿಕೊಂಡಂತೆ ಆಗುತ್ತಿತ್ತು. ಬಹಳಷ್ಟು ದೇಶಗಳು ಭಾರತದ ಪ್ರತ್ಯುತ್ತರವೇನಿರಬಹುದೆಂಬ ನಿರೀಕ್ಷೆಯಲ್ಲಿದ್ದವು. ಆಗ ಲಾಲ್ ಬಹದ್ದೂರರು - "China's allegation is untrue. If China attacks India it is our firm resolve to fight for our freedom. The might of China will not deter us from defending our territorial integrity." ಎಂದು ಹೇಳಿ ಚೀನಾದ ಬಾಯಿ ಮುಚ್ಚಿಸಿದ್ದರು. 1965ರ ಇಂಡೋ-ಪಾಕ್ ಕದನದಲ್ಲಿ ಭಾರತ ಜಯ ಸಾಧಿಸಿ ಕಾಶ್ಮೀರವನ್ನು ವಶ ಪಡಿಸಿಕೊಂಡಿತಲ್ಲದೆ ಲಾಹೋರ್ ವರೆಗಿನ ಪಂಜಾಬ್ ನ ಭೂಮಿ ಭಾರತದ ವಶಕ್ಕೆ ಬಂದಿತ್ತು. ನಂತರ ಅಂತರರಾಷ್ಟ್ರೀಯ ಒತ್ತಡಕ್ಕೆ ಮಣಿದು, ಎರಡು ದೇಶಗಳೂ ಒಂದು ಒಪ್ಪಂದಕ್ಕೆ ಬರಲು ಒಪ್ಪುತ್ತವೆ, ಪಾಕಿಸ್ತಾನಕ್ಕೆ ಅದರಿಂದ ವಶಪಡಿಸಿಕೊಂಡ ಭೂಮಿಯನ್ನು ಅದಕ್ಕೆ ಹಿಂತಿರುಗಿಸುವುದೆಂದೂ, ಕಾಶ್ಮೀರ ವಿಚಾರವಾಗಿ ಪಾಕ್ ಇನ್ನೆಂದೂ ತಂಟೆ ಮಾಡುವುದಿಲ್ಲವೆಂದೂ, ಎರಡು ರಾಷ್ಟ್ರಗಳೂ ಸೌಹಾರ್ದದಿಂದ ವ್ಯವಹರಿಸಬೇಕೆಂದೂ ಒಪ್ಪಂದವಾಗಿರುತ್ತದೆ.

ಒಪ್ಪಂದಕ್ಕೆ ಸಹಿ ಹಾಕಲು ಶಾಸ್ತ್ರೀಜಿ ರಷ್ಯಾದ ತಾಷ್ಕೆಂಟ್ ಗೆ ತೆರಳುತ್ತಾರೆ, ಭಾರತದ ಪರವಾಗಿ ಒಪ್ಪಂದಕ್ಕೆ 11 ಜನವರಿ 1966ರಂದು ಸಹಿಯನ್ನೂ ಮಾಡುತ್ತಾರೆ, ಆದರೆ ಅದೇ ರಾತ್ರಿಯಂದು ಅವರಿಗೆ ಹೃದಯಾಘಾತವಾಗುತ್ತದೆ, ಅಲ್ಲೇ ಮರಣವನ್ನಪ್ಪುತ್ತಾರೆ. ಅವರ ದೇಹದ ಮರಣೋತ್ತರ ಪರೀಕ್ಷೆಯನ್ನು ನಡೆಸಲು ಭಾರತ ಸರ್ಕಾರವೂ ಮುಂದೆ ಬರುವುದಿಲ್ಲ, ರಷ್ಯಾ ಸರ್ಕಾರವೂ ಅದರ ಅಗತ್ಯವಿಲ್ಲವೆಂದು, ಅವರಿಗೆ ಹೃದಯಾಘಾತವಾಗಿದ್ದೆ ನಿಜವೆಂದು ಸಾರಿ ಬಿಡುತ್ತವೆ. ಹೃದಯಾಘಾತವಾಗಿದ್ದರೆ ಅವರ ದೇಹವೇಕೆ ನೀಲಿಗಟ್ಟಿತ್ತು ಎಂಬ ಅವರ ಕುಟುಂಬವರ್ಗದವರ ಪ್ರಶ್ನೆಗೆ ಇದುವರೆಗೂ ಉತ್ತರ ದೊರೆತಿಲ್ಲ. 2009ರಲ್ಲಿ ಅವರ ಸಾವಿನ ಸತ್ಯಾಸತ್ಯತೆ ತಿಳಿಯಲು ಮಾಹಿತಿ ಹಕ್ಕು ಕಾಯ್ದೆಯಡಿ ಸರ್ಕಾರಕ್ಕೆ ಬಂದ ಅರ್ಜಿಯನ್ನು ಕೇಂದ್ರ ಸರ್ಕಾರ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರಬಹುದಾದ ಗೌಪ್ಯ ವಿಚಾರ ಎಂದು ಘೋಷಿಸಿ, ಮಾಹಿತಿ ನೀಡಲು ನಿರಾಕರಿಸುತ್ತದೆ. ಇದು ಅಂತಹ ಮಹಾನ್ ನಾಯಕನಿಗೆ ನಾವು ಸಲ್ಲಿಸಿದ ಕೃತಜ್ಞತೆ.

ಶಾಸ್ತ್ರೀಜಿ ಕಾಲದಲ್ಲಿದ್ದ, ರಾಷ್ಟ್ರದ ಪ್ರತಿಯೊಬ್ಬ ನಾಯಕರ ಜನ್ಮದಿನವನ್ನು ಒಂದಲ್ಲಾ ಒಂದು ದಿನಾಚರಣೆಯ ಹೆಸರಿನಲ್ಲಿ ಆಚರಿಸಲಾಗುತ್ತದೆ. ಇಂದು ಶಾಸ್ತ್ರೀಜಿಯವರ 108ನೇ ಜನ್ಮದಿನ, ಈ ದಿನ 2 October ಮಾತ್ರ ಗಾಂಧೀಜಿಯವರ ಗುಣಗಾನದಲ್ಲೇ ಕಳೆದು ಹೋಗುತ್ತದೆ. ಎಲ್ಲೋ ಕೆಲವೊಂದು ಶಾಲೆಗಳಲ್ಲಿ ಗಾಂಧೀಜಿಯವರ ಭಾವಚಿತ್ರದ ಪಕ್ಕದಲ್ಲಿ, ಶಾಸ್ತ್ರೀಜಿಯವರ ಪಟವನ್ನೂ ಇಟ್ಟಿರುತ್ತಾರಾದರೂ, ಮಕ್ಕಳಿಗೆ ಅವರ ಸಾಧನೆಗಳ ಬಗೆಗೆ ಪರಿಚಯ ಮಾಡಿಸಲು ಸಮಯವೇ ಸಾಲದು. ಗಾಂಧೀಜಿಯವರ ಜೀವನಾದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ನಾಯಕರಲ್ಲಿ ಶಾಸ್ತ್ರೀಜಿ ಅಗ್ರಗಣ್ಯರು, ಇಂದು ಕೇವಲ ಗಾಂಧೀಜಿಯವರ ಉಪದೇಶಗಳನ್ನು ನೆನಸಿಕೊಂಡರೆ ಸಾಲದು, ಶಾಸ್ತ್ರೀಜಿಯವರ ಕರ್ತವ್ಯ ರೀತಿ, ಅವರ ಕರ್ತೃತ್ವ ಶಕ್ತಿಗಳನ್ನೂ ಸ್ಮರಿಸಬೇಕು. ಇಂದಿನ ದಿನವನ್ನು ಅವರಿಗೆ ಮೀಸಲಾಗಿಡ ಬಹುದೇ???

Happy Birth Day Shastriji. Our country needs you today.