Wednesday 30 October 2013

ಹಬ್ಬಗಳ ರಾಜ ದೀಪಾವಳಿ

ಹಬ್ಬಗಳ ರಾಜ ದೀಪಾವಳಿ ಬಂದಿತೆಂದರೆ ಎಲ್ಲೆಲ್ಲೂ ಸಂಭ್ರಮ ಸಡಗರದ ವಾತಾವರಣ ಮನೆ ಮಾಡಿರುತ್ತದೆ. ಮೂರು ದಿನ ಮನೆಮಂದಿಯೆಲ್ಲ ಸೇರಿ ಸಿಹಿ ಮಾಡಿ, ಹೊಸ ಬಟ್ಟೆ ತೊಟ್ಟು, ಪಟಾಕಿ ಹೊಡೆಯುವ ಖುಷಿ ಎಲ್ಲರ ಮನದಲ್ಲೂ. ಭಾರತೀಯ ಹಬ್ಬಗಳು ಸಾಮಾನ್ಯವಾಗಿ ಧಾರ್ಮಿಕ ಹಾಗೂ ಪಾರಮಾರ್ಥಿಕ ರೀತಿಯಲ್ಲಿ ಆಸ್ತಿಕ ಮಂದಿಯ ಕಣ್ಣು ತೆರೆಯಿಸುವುದಲ್ಲದೆ, ಭಾರತೀಯ ಸಂಸ್ಕೃತಿಯ ಪ್ರತೀಕವೂ ಆಗಿದೆ. ಅದರಲ್ಲೂ ದೀಪಾವಳಿಯ೦ದು ಧರ್ಮದ ಹಂಗು ತೊರೆದು ಎಲ್ಲರೂ ಒಟ್ಟುಗೂಡುವ ಸಂದರ್ಭಗಳೇ ಹೆಚ್ಚು, ಹಾಗಾಗಿ ಈ ಹಬ್ಬ ರಾಷ್ಟ್ರೈಕತೆಯನ್ನು ತುಂಬುವುದೆಂದರೆ ಅತಿಶಯೋಕ್ತಿ ಎನಿಸುವುದಿಲ್ಲ, ಅಲ್ಲವೇ? ಅಲ್ಲದೆ ಈ ಹಬ್ಬಕ್ಕೊಂದು ವೈಜ್ಞಾನಿಕ ಹಿನ್ನೆಲೆಯೂ ಇದೆ, ಇದು ಬರುವ ಕಾರ್ತಿಕ ಮಾಸದಲ್ಲಿ ಸಂಜೆಯ ವೇಳೆ ಕತ್ತಲೆಯು ಹೆಚ್ಚು. ಆದ್ದರಿಂದ ಮಾಸವಿಡೀ ಮನೆಯ ಮುಂದೆ ದೀಪ ಹಚ್ಚಿಡಬೇಕೆಂಬ ಕಟ್ಟಳೆ ಮಾಡಿದ ನಮ್ಮ ಪೂರ್ವಿಕರು, ದಾರಿಹೋಕರಿಗೆ ನೆರವಾಗಲೆಂಬ ದೃಷ್ಟಿಯಿಂದಲೇ ಇದನ್ನು ಮಾಡಿದರೆನೋ? 

ಮೊದಲೇ ಹೇಳಿದಂತೆ ಈ ಹಬ್ಬ ನಮ್ಮ ನಾಡಿನಲ್ಲಿ ಮೂರು ದಿನ ಮುಖ್ಯವಾಗಿ ಆಚರಿಸಲ್ಪಟ್ಟರೆ, ದೇಶದ ಕೆಲವು ಕಡೆ ಐದು ದಿನದವರೆಗೂ ಹಬ್ಬದ ಸಂಭ್ರಮ ತುಂಬಿರುತ್ತದೆ. ಶ್ರೀಕೃಷ್ಣ, ಮಡದಿ ಸತ್ಯಭಾಮೆಯೊಡಗೂಡಿ ನರಕಾಸುರನ ಸಂಹಾರ ಮಾಡಿದ ದಿನದ ಪ್ರತೀಕವಾಗಿ ದೀಪಾವಳಿಯ ಮೊದಲ ದಿನ ನರಕ ಚತುರ್ದಶಿ ಆಚರಿಸಲ್ಪಡುತ್ತದೆ. ಇದರ ಮುನ್ನಾ ದಿನ ಹೆಣ್ಣುಮಕ್ಕಳು ಮನೆಯ ಸ್ನಾನದ ಹಂಡೆಯನ್ನು ತೊಳೆದು, ಹೊಸನೀರು ತುಂಬಿ ಅದರ ಮೇಲೆ ವಿಘ್ನ ವಿನಾಶಕನ ಪೂಜೆ ಮಾಡಿ ತಯಾರಿ ನಡೆಸಿರುತ್ತಾರೆ. ಚತುರ್ದಶಿಯ ದಿನ ಮುಂಜಾನೆ ಬೇಗನೆ ಎದ್ದು ಎಲ್ಲರೂ ಎಣ್ಣೆ ನೀರು ಹಾಕಿಕೊಂಡು, ಸಿಹಿ ಹಂಚಿ, ಪಟಾಕಿ ಹೊಡೆದು ಮಧುಸೂದನನ ವಿಜಯವನ್ನು ಆಚರಿಸುತ್ತಾರೆ. ಉತ್ತರ ಭಾರತದ ಕೆಲವೆಡೆ ಶ್ರೀರಾಮ ರಾವಣನ ಮೇಲೆ ವಿಜಯ ಸಾಧಿಸಿ, ಸೀತೆಯೊಂದಿಗೆ ಅಯೋಧ್ಯೆಯನ್ನು ಮರುಪ್ರವೇಶಿಸಿದ ದಿನವಾಗಿ ಈ ದಿನ ಆಚರಿಸಲ್ಪಡುತ್ತದೆ. ಆ ದಿನ ಮನೆಯೆಲ್ಲ ದೀಪದಿಂದ ಅಲಂಕರಿಸಿ ವಿಜಯೀ ರಾಮನನ್ನು ಸ್ವಾಗತಿಸಲಾಗುತ್ತದೆ.

ಮರುದಿನ ಲಕ್ಷ್ಮೀ ಪೂಜೆ, ಲಕ್ಷ್ಮಿ ಕ್ಷೀರ ಸಾಗರದಿಂದ ಉದಯಿಸಿದ ದಿನವಿದೆಂಬ ನಂಬಿಕೆ ಹಲವು ಕಡೆ ಇದೆ. ವ್ಯಾಪಾರ, ವಹಿವಾಟುದಾರರಿಗೆ ಅತ್ಯಂತ ಪ್ರೀತಿಯ ದಿನವಿದು. ಲಕ್ಷ್ಮಿಯನ್ನು ಪೂಜಿಸಿ, ಅವಳ ಅನುಗ್ರಹವಿರಲೆಂದು ಪ್ರಾರ್ಥಿಸುತ್ತಾರೆ.

ಮೂರನೆಯ ದಿನ ಬಲಿಪಾಡ್ಯಮಿ, ವಿಷ್ಣು ವಾಮನ ರೂಪಿಯಾಗಿ ಬಲಿ ಮಹಾರಾಜನನ್ನು ನರಕಕ್ಕೆ ತಳ್ಳಿದ ದಿನ, ಇದೇ ದಿನ ಉತ್ತರ ಭಾರತದಲ್ಲಿ, ಗೋವರ್ಧನ ಪೂಜೆಯಾಗಿ ನಡೆಸಲ್ಪಡುತ್ತದೆ. ಬಾಲಕ ಕೃಷ್ಣ ಇಂದ್ರನ ಬದಲಾಗಿ ಗೋವರ್ಧನ ಪೂಜೆಯನ್ನು ಸಾರಿ ಇಂದ್ರನ ಕೋಪದಿಂದ ತನ್ನವರನ್ನು ಕಾಪಾಡಲು ಗೋವರ್ಧನ ಗಿರಿಯನ್ನು ಎತ್ತಿದ ದಿನವದು. ಅಂದು ಅನ್ನಕೂಟವನ್ನು ಬೆಟ್ಟದ ಮಾದರಿಯಲ್ಲಿ ಮಾಡಿ ಸಿಂಗರಿಸಿ ಕೃಷ್ಣ ವಿಜಯವನ್ನು ಸಾರುತ್ತಾರೆ. ಅಂತೆಯೇ ಮರುದಿನವನ್ನು ಯಮ ದ್ವಿತೀಯ ಎಂದು ಅಲ್ಲಿನವರು ಆಚರಿಸುತ್ತಾರೆ. ಒಟ್ಟಿನಲ್ಲಿ ಕೆಡುಕಿನ ಮೇಲೆ ಒಳಿತಿನ ದಿಗ್ವಿಜಯವನ್ನು ಸಾರುವ ಹಬ್ಬ ದೀಪಾವಳಿ.

ಆದರೆ ಇಂದು, ಹಬ್ಬದ ಹಿನ್ನೆಲೆ ಆಚರಣೆಗಳಿಗಿಂತ ಪಟಾಕಿಯ ಹುಚ್ಚೇ ಹೆಚ್ಚಾಗಿದೆ. ಒಂದು ಅಧ್ಯಯನದ ಪ್ರಕಾರ ದೀಪಾವಳಿಯ ಒಂದೇ ದಿನ ಸುಮಾರು ೬೦,೩೪೦ ಟನ್ ಗಳಷ್ಟು ಇಂಗಾಲಾಮ್ಲ ನಮ್ಮ ವಾತಾವರಣವನ್ನು ಸೇರುತ್ತದೆ. ಇದು ಸರಿ ಸುಮಾರು ೧೨,೦೦೦ ಕಾರುಗಳು ಒಂದುವರ್ಷದ ಅವಧಿಯಲ್ಲಿ ಬಿಡುವ ಇಂಗಾಲಾಮ್ಲಕ್ಕೆ ಸಮ. ಮೊದಲೇ ಹದಗೆಟ್ಟಿರುವ ವಾತಾವರಣಕ್ಕೆ ನಾವು ಇಷ್ಟೆಲ್ಲಾ ಕೊಡುಗೆ ನೀಡಬೇಕೆ? ಇನ್ನು ಕಳೆದ ವರ್ಷ ನಡೆದ ದೀಪಾವಳಿಯ ಅಪಘಾತಗಳೋ ದೇವರಿಗೇ ಪ್ರೀತಿ.

ಪಟಾಕಿ ತಯಾರು ಮಾಡುವ ಶಿವಕಾಶಿಯಲ್ಲೇ, ಕಾರ್ಖಾನೆಯಲ್ಲಿ ನಡೆದ ಅಪಘಾತದಲ್ಲಿ ೩೦ ಜನ ಸತ್ತರು. ಬರೋಡ, ಅರಿಯಲೂರು, ಔರಿಯ ಇತರೆಡೆ ಇದೇ ರೀತಿ ಪಟಾಕಿ ಮಾರುಕಟ್ಟೆಯಲ್ಲಿ ನಡೆದ ಅಪಘಾತಗಳೆಷ್ಟೋ? ಸಾಲದ್ದಕ್ಕೆ ನಮ್ಮ ಜನ ಚಿಕ್ಕ ಮಕ್ಕಳ ಕೈಯಲ್ಲೆಲ್ಲ ಪಟಾಕಿಯನ್ನಿತ್ತು ಅವೆಷ್ಟೋ ಕಂದಮ್ಮಗಳು ಕಣ್ಣು ಕಳೆದು ಕೊಂಡಿವೆ, ಮೈಯೆಲ್ಲಾ ಸುಟ್ಟ ಗಾಯ ಮಾಡಿಕೊಂಡಿವೆ. ದೊಡ್ಡವರ ಪಾಡೂ ಅಷ್ಟೇ, ಬಹುಶಃ ತನ್ನ ಭಕ್ತರು ಈ ರೀತಿ ತನ್ನ ವಿಜಯವನ್ನು ಆಚರಿಸುತ್ತಾರೆಂದು ಕೃಷ್ಣ ಪರಮಾತ್ಮನೂ ಊಹಿಸಿರಲಾರನೇನೊ?

ಒಳಿತಿನ ಮೇಲೆ ಕೆಡುಕಿನ ವಿಜಯವನ್ನಾಚರಿಸ ಹೋಗಿ ನಾವು ನಮ್ಮ ವಾತಾವರಣಕ್ಕೇ ಕೆಡುಕನ್ನುಂಟು ಮಾಡುತ್ತಿದ್ದೇವೆ. ಇಂತಹ ಆಚರಣೆ ಬೇಕೆ? ಈ ಬಾರಿಯಾದರೂ, ನಾವೊಬ್ಬರು ಮಾಡಿದರೆ ಏನಾಗುತ್ತದೆ ಎಂಬ ಸಿನಿಕತೆಯನ್ನು ಬಿಟ್ಟು, ಕೇವಲ ದೀಪಗಳೊಂದಿಗೆ ದೀಪಾವಳಿಯನ್ನಾಚರಿಸೋಣ. ಈ ಬಾರಿಯಾದರೂ ದೀಪಾವಳಿಯ ಅಪಘಾತದ ಸುದ್ದಿಗಳು ಬಂದು ಹಬ್ಬದ ಸಂಭ್ರಮಕ್ಕೆ ಸೂತಕ ತರದಿರಲಿ. ಎಲ್ಲರಿಗೂ ಹಬ್ಬದ ಶುಭಾಶಯಗಳು. 

Thursday 24 October 2013

ಲಹರಿ

ಸುಮ್ಮನೇ ಬಯಸಿದಾಕ್ಷಣ ದೊರೆಯಲು,
ಕವಿತ್ವವೇನು ಹಾದಿಬದಿಯ ತಿಂಡಿಯೇನು?

ಮನದ ದೆಣಪೆಯಲಿ ಚಿಮ್ಮಬೇಕು ಮೊದಲು,
ಭಾವಗಳ ಒರತೆ.
ಒತ್ತಿ ಬಂದ ಭಾವಬೀಜಗಳ,
ಮನದಂಗಳದಲಿ ಬಿತ್ತಿ,
ಅರಿವಿನ ಮಳೆಗರೆದು,
ಪದಗೊಂಚಲ ಗೊಬ್ಬರ ಹೂಡಿ,
ಬೆಳೆಸಬೇಕೊಂದು ಕವಿತೆಯ, ಅರೆರೆ!
ಇನ್ನೂ ಮುಗಿಯದಿದರ ಬೇಡಿಕೆ!
ಪ್ರಾಸಾನುಪ್ರಾಸಗಳ ಅಲಂಕಾರದ ಚಪ್ಪರ
ಆಸರೆಗಾಗಿ ಬೇಕಂತೆ, ಬಳುಕುವ ಬಳ್ಳಿ ಕವನಕ್ಕೆ!

ಇಷ್ಟೆಲ್ಲಾ ಬೆವರು ಸುರಿಸಿ, ಅಲ್ಲಲ್ಲ
ಪ್ರೀತಿ ಹರಿಸಿ, ಮನದಂಗಳದೊಳು ಜಾಗವಿತ್ತರೂ,
ಕವಿಗಳ ಕಷ್ಟ ತಪ್ಪದು.
ಬೆಳೆದ ಕವನ ಓದುವವನದಂತೆ!
ಹರಿಸಿದ ಪ್ರೀತಿ ಪಡೆದವನದಂತೆ!
ಕವಿಯೆನಿಸಿಕೊಂಡವ, ಭಾವಝರಿಯ ಹುಡುಕುತ್ತಾ,
ಮತ್ತೆ ಸುರಿಸಬೇಕು ಹನಿ ಹನಿ ಪ್ರೀತಿಯ,
ಬೆಳೆಸಬೇಕು ಮತ್ತೊಂದು ಕಾವ್ಯ ಹಂದರ.

ಸುಮ್ಮನೇ ಬರುವುದಿಲ್ಲ ಕವಿತ್ವ!
ಅದಕ್ಕೂ ಸಿದ್ಧಿಸಬೇಕು ಲೋಕಪ್ರೀತಿಯ ಋಷಿತ್ವ!

Wednesday 23 October 2013

ಅನ್ಯರೊರೆದುದನೆ

ಅನ್ಯರೊರೆದುದನೆ ಬರೆದುದನೆ ನಾ ಬರೆಬರೆದು
ಬಿನ್ನಗಾಗಿದೆ ಮನವು ಬಗೆಯೊಳಗನೇ ತೆರೆದು
ನನ್ನ ನುಡಿಯನೆ ಬಣ್ಣ ಬಣ್ಣದಲಿ ಬಣ್ಣಿಸುವ
ಪನ್ನತಿಕೆ ಬರುವನಕ, ನನ್ನ ಬಾಳಿದು ನರಕ.

ಹೀಗೆನ್ನುತ್ತಾರೆ ಅಡಿಗರು. ತಮ್ಮ ಭಾವಸಂಗಮದ ಕವನವೊಂದರಲ್ಲಿ. ಹೆಚ್ಚೂ ಕಡಿಮೆ ಬರೆಯಲು ಕೂಡುವ ಎಲ್ಲ ಹೊಸಬರ ಮನಃಸ್ಥಿತಿಗೆ ಹಿಡಿದ ಕೈಗನ್ನಡಿಯಂತಿವೆ ಸಾಲುಗಳಿವು. ನನಗೂ ಅಷ್ಟೇ, ಬರೆಯಲು ಕೂತರೆ ಪದಗಳೇ ಹುಟ್ಟುವುದಿಲ್ಲ. ಹಾಗೆಂದು ಬರೆಯದೆ ಸುಮ್ಮನೆ ಇರಲೂ ಆಗುವುದಿಲ್ಲ, ಏನೋ ಒಂದು ವಿಚಿತ್ರ ಚಡಪಡಿಕೆ. ಹಾಗೂ ಹೀಗೂ ಮಾಡಿ ಏನೇ ಬರೆದರೂ, ಬರೆದಿದ್ದೆಲ್ಲ ಬಾಲಿಶ ಎನಿಸಿ ಮತ್ತೊಬ್ಬರಿಗೆ ತೋರಿಸಲು ಹೋಗುವುದಿಲ್ಲ, ಬರೆದ ಅವೆಷ್ಟೋ ಸಾಲುಗಳು ಹೀಗೆ ನನ್ನೊಳಗೇ ಹುದುಗಿ ಹೋಗಿವೆ. ಇದರ ಮಧ್ಯೆ ಓದು ಬರಹಕ್ಕೆ ಬಿಡುವು ಕೊಡದ ವೈಯಕ್ತಿಕ ಕೆಲಸಗಳು, ಎಲ್ಲ ಸೇರಿ ನನ್ನ ಸಾಹಿತ್ಯ ಕೃಷಿ ಕುಂಟುತ್ತಾ ಸಾಗುತ್ತಿದೆ.


ಏನೇ ಬರೆದರೂ ಈ ರೀತಿ ಬರೆಯುವವರು ಸಾವಿರ ಮಂದಿ, ಎಲ್ಲಿ ನಾನು ಅವರನ್ನು ಅನುಕರಿಸಿದಂತಾಗುವುದೋ? ಎನಿಸಿ ನಿಲ್ಲಿಸಿದ್ದೇನೆ. ಅನುಕರಣೆಗಿಂತ ಅನುಸರಣೆ ಉತ್ತಮ ಎಂಬ ಅರಿವೇನೋ ಇದೆ. ಆದರೆ ಎರಡರ ಮಧ್ಯೆ ಇರುವ ಕೂದಲೆಳೆಯ ಅಂತರವನ್ನು ಅರ್ಥೈಸಿ, ಅದರಂತೆ ನಡೆಯುವುದೇ ಕಷ್ಟ. ಎಷ್ಟೋ ಸಲ ಕುಳಿತು ಬರೆದಾಗ, ಈ ಶೈಲಿಯ ಲೇಖನ ಯಾವುದೋ ಬ್ಲಾಗ್ ನಲ್ಲಿ ಓದಿದಂತಿದೆಯಲ್ಲ? ಆ ಶೈಲಿಯನ್ನೇ ನಾನು ನಕಲು ಮಾಡುತ್ತಿದ್ದೇನೆ, ಕೊನೆಪಕ್ಷ ನನ್ನದೇ ಆದ ಶೈಲಿಯೊಂದನ್ನಾದರೂ ರೂಪಿಸಿಕೊಳ್ಳಬೇಕು ಎನಿಸುತ್ತಿರುತ್ತದೆ. ಈ ಗೊಂದಲಕ್ಕೆಲ್ಲ ಕೊನೆಯೆಂದೋ?? ಇನ್ನೂ ಕಂಡಿಲ್ಲ.

ಯಾವುದೇ ನಿರ್ದಿಷ್ಟ ಉದ್ದೇಶ, ಸಿದ್ಧಾಂತ, ಗುರಿ ಇಟ್ಟುಕೊಂಡು ಬರೆಯುವವಳಲ್ಲ ನಾನು. ಮನಸ್ಸಿಗೆ ಬಂದಾಗ ಮೂಡಿದ್ದನ್ನೆಲ್ಲ ಗೀಚುವವಳು. ನನ್ನ ಗೊಂದಲ ತೀರಿ ಮನ ತಿಳಿಯಾಗುವವರೆಗೂ ಬಹುಶಃ ಇದೇ ಧಾಟಿಯ ಬರಹಗಳೇ ನನ್ನ ಬ್ಲಾಗ್ ಗೋಡೆ ತುಂಬಾ ಅಂಟಿಕೊಳ್ಳುತ್ತವೇನೋ??