Tuesday 13 June 2017

ಜಿಂದಗಿ ಜೀನೇಕಾ ತರೀಖ

ಬಷೀರ್ ಚಿಂತಿಸುತ್ತಲೇ ಇದ್ದ. ಇತ್ತೀಚಿಗೆ ಪದೇ ಪದೇ ಅವನಿಗೆ ಬೀಳುತ್ತಿರುವ ಕನಸು ಅವನ ಆಲೋಚನೆಯ ಪರಿಧಿಗೇ ನಿಲುಕುತ್ತಿರಲಿಲ್ಲ. ಅವನ ಚಿಂತನೆಯನ್ನೆಲ್ಲ ತಲೆಕೆಳಗು ಮಾಡಿ, ಸಿಟ್ಟು ಅಸಹನೆಯಿಂದ ಕುದಿಯುವಂತೆ ಮಾಡುತ್ತಿತ್ತು. ಅಬ್ಬು ಯಾಕೆ ಹೀಗೆಲ್ಲ ಹೇಳುತ್ತಿದ್ದಾರೆ? ಅಲ್ಲ, ಅಷ್ಟಕ್ಕೂ ಅಬ್ಬು ನಿಜವಾಗಿಯೂ ಹಾಗೆಲ್ಲ ಹೇಳಿದರೋ? ಅಥವಾ ಇದೆಲ್ಲ ತನ್ನ ಭ್ರಮೆಯೋ ಎಂಬುದೇ ಅವನ ಮುಂದಿದ್ದ ದೊಡ್ಡ ಪ್ರಶ್ನೆ. ನೀವೇ ಹೇಳಿ, ತನ್ನ ಮೊದಲ ಹೆಂಡತಿ ನಾಲ್ಕು ಮಕ್ಕಳಾದರೂ ಗಂಡು ಮಗು ಹೆರಲಿಲ್ಲ ಎಂದು ಮುಲಾಜಿಲ್ಲದೇ "ತಲಾಖ್ ತಲಾಖ್ ತಲಾಖ್" ಎಂದು ಘೋಷಿಸಿದ್ದ ಅವನ ಅಬ್ಬಾಜಾನ್, ಬಷೀರ್ ನ ಅಮ್ಮಿ ಗಂಡ ಮತ್ತೊಂದು ಸಂಬಂಧ ಇಟ್ಟುಕೊಂಡದ್ದನ್ನು ವಿರೋಧಿಸಿದಾಗ ಮುಲಾಜಿಲ್ಲದೇ ಅವಳನ್ನು ತವರಿಗಟ್ಟಿದ್ದ ಅಬ್ಬಾಜಾನ್, ಕಾಫೀರ್ ರನ್ನು ನಾಶ ಮಾಡಿದರೆ ಕರುಣಾಳುವಾದ ಅಲ್ಲಾಹ್ ಸ್ವರ್ಗದಲ್ಲಿ ತಮಗೆ 72 ಕನ್ಯೆಯರನ್ನು ಕೊಟ್ಟು ಸುಖವಾಗಿ ನೋಡಿಕೊಳ್ಳುತ್ತಾನೆ ಎಂದು ಸದಾ ಹೇಳುತ್ತಾ, ಅಲ್ಲಾಹುವಿನ ಸಂದೇಶಗಳನ್ನು ಪ್ರಪಂಚಕ್ಕೆಲ್ಲ ಸಾರಿ, ಕಾಫೀರ್ ರನ್ನು ನಾಶಮಾಡುವ ಪವಿತ್ರ ಕೆಲಸಕ್ಕೆ ತನ್ನನ್ನು ನಿಯೋಜಿಸಿದ್ದ ಅಬ್ಬಾಜಾನ್, ತಾವು ಸತ್ತ ಒಂದು ವರ್ಷದ ನಂತರ ಪದೇ ಪದೇ ಕನಸಲ್ಲಿ ಬಂದು, ಹೀಗೆ ಏಕಾಏಕಿ ತಮ್ಮೆಲ್ಲ ನಂಬಿಕೆಗಳನ್ನೂ ಬುಡಮೇಲು ಮಾಡುವಂತೆ ಮಾತಾಡಿದರೆ?? ಅವನು ಹೇಗೆ ತಾನೇ ನಂಬಿಯಾನು.
ಫರೀದಾ ಬೇಗಂ ಬೆಳಗಿನಿಂದ ತನ್ನ ಗಂಡನ ಚಲನವಲನಗಳನ್ನು ಗಮನಿಸುತ್ತಲೇ ಇದ್ದಾಳೆ. ಅವಳಿಗೆ ಬೇರೇನೂ ಅರ್ಥವಾಗದಿದ್ದರೂ ಗಂಡ ಇತ್ತೀಚಿಗೆ ಎಂದಿನಂತಿಲ್ಲ ಎಂಬುದನ್ನು ಮಾತ್ರ ಅರ್ಥ ಮಾಡಿಕೊಂಡಿದ್ದಾಳೆ. ಮನಸ್ಸಿಗೆ ಯಾವುದಾದರೂ ವಿಷಯ ಹೊಕ್ಕರೆ ಸಾಕು, ಅದು ಅವನಿಗೆ ಕನಸಾಗಿಯೂ ಕಾಡುವುದು ಅವಳಿಗೇನು ಹೊಸದೇ?? ಆದರೂ ತಾನಾಗಿಯೇ ಕೇಳಿ ಅವನ ಕೈಲಿ ಯಾಕೆ ಬೈಸಿಕೊಳ್ಳುವುದು? ಅವನೇ ಹೇಳಿದರೆ ಹೇಳಲಿ ಎಂದು ತನ್ನ ಯಾವೊತ್ತಿನ ಸಂಗಾತಿ ಮೌನಕ್ಕೆ ಶರಣಾಗಿದ್ದಾಳೆ. ಇವನೂ ಚಿಂತಿಸಿ, ಚಿಂತಿಸಿ ಸಾಕಾಗಿ ಕೊನೆಗೆ ಅವಳನ್ನು ಈ ಕುರಿತು ಒಂದು ಮಾತು ಕೇಳೋಣ. ಆ ಮಡ್ಡು ತಲೆಗೆ ಏನಾದರೂ ಹೊಳೆದರೆ ಹೇಳಲಿ ಎಂದುಕೊಂಡು, "ಫರೀದಾ, ಏ ಫರೀದಾ, ಆ ಇಧರ್" ಎಂದು ಕೂಗಿಕೊಂಡ. ಅವನ ಧ್ವನಿಯಲ್ಲಿನ ಕೋಪ, ಅಸಹನೆ ಗುರುತಿಸಿ, ಇವತ್ತೇನೋ ಗ್ರಹಚಾರ ಕಾದಿದೆ ಎಂದುಕೊಂಡು ಇವಳು ಸ್ವಲ್ಪ ಗಾಬರಿಯಲ್ಲೇ ಓಡಿದಳು. "ಫರೀದಾ ಅಗರ್ ಹಮ್ ಕಾಫಿರ್ ಲೋಗೋಂ ಕೋ ಮಾರೇಂಗೆ ತೊ, ಕ್ಯಾ ಖುದಾ ಹಮೇ ಖುಶ್ ನಹೀ ರಖೇ೦ಗೆ? ಅಚಾನಕ್ ಆಗಿ ಬಂದ ಅವನ ಈ ಪ್ರಶ್ನೆ ಇವಳನ್ನು ದಂಗು ಬಡಿಸಿತು. ಜೀ ಅಬ್ ಕ್ಯಾ ಹುವಾ ಎಂದಳು. ಕ್ಯಾ ಹುವಾ, ಕ್ಯಾ ನಹೀ ಹುವಾ ಅದೆಲ್ಲ ಬಿಡು. ಖುದಾ ನಮ್ಮನ್ನ ಚನ್ನಾಗಿ ನೋಡ್ಕೊಳ್ತಾನ ಇಲ್ವಾ ಅದನ್ನ ಹೇಳು ಎಂದು ಸ್ವಲ್ಪ ಬಿರುಸಾಗಿಯೇ ಕೇಳಿದ. ಇವಳು ಅಷ್ಟಕ್ಕೇ ಹೆದರಿ ಅಳಲು ಶುರುವಿಟ್ಟಳು. ಬಷೀರ್ ಗೆ ಮೊದಲೇ ಅಸಹನೆ ಮೂಡಿತ್ತು. ಈಗ ಇವಳ ಅಳು ನೋಡಿ, ಕೋಪ ನೆತ್ತಿಗೇರಿ ಹೊಡೆಯಲು ಕೈ ಎತ್ತಿದ್ದವನು, "ಅಪ್ನೀ ಬೇಗಂ ಕೋ ಖುಷ್ ರಖ್ನಾ" ಎಂದ ಅಬ್ಬುವಿನ ಮಾತು ನೆನಪಾಗಿ ಎತ್ತಿದ್ದ ಕೈ ಇಳಿಸಿ ಗೊಣಗಿಕೊಂಡು ಹೊರಗೆ ಹೋದ. ಅವನಿಗೆ ಏನಾಗಿದೆ ಎಂಬುದು ಅವಳಿಗೆ ಅರ್ಥವಾಗದಿದ್ದರೂ, ಜೀನೇಕಾ ತರೀಖ ಏ ನಹೀ ಕತೆ, ಕಾಫಿರ್ ಲೋಗ್ ಯಾರಿಗೂ ತೊಂದರೆ ಕೊಡಬಾರದಂತೆ, ಎಲ್ಲಾರು ಅಲ್ಲಾಹುನ ಮಕ್ಕಳೇ ಅಂತೆ, ಯಾರನ್ನೂ ಕೊಲ್ಲಬಾರದಂತೆ, ಬೀವೀನ ಚನ್ನಾಗಿ ನೋಡಿಕೊಳ್ಳಬೇಕಂತೆ, ಅಬ್ ಇಸ್ ನಾಲಾಯಕ್ ಕೋ ಖುಷ್ ರಖ್ನಾ ಪಡೇಗಾ ಮಂಝೆ ಎನ್ನುತ್ತಾ ಹೋದ ಅವನ ಗೊಣಗುವಿಕೆ ಕೇಳಿ, ಅವಳ ಮನಸ್ಸು ಸಂತಸದಿಂದ ತುಂಬಿ ಹೋಯಿತು. ಯಾ ಖುದಾ, ತುಮ್ನೆ ಮೇರಾ ಸುನ್ಲಿಯಾ ಎನ್ನುತ್ತಾ ದೇವರಿಗೆ ಕೃತಜ್ಞತೆ ಅರ್ಪಿಸಿದಳು. 
ಸಂಜೆ ಮನೆಗೆ ಬಂದಾಗ ಯಾವಾಗಲೂ ಸಿಟ್ಟಾಗಿ, ಕುಡಿಯುತ್ತಾ, ಹೊಂಚು ಹಾಕುತ್ತಾ, ಫೋನ್ನಲ್ಲೇ ವ್ಯಸ್ತನಾಗಿರುತ್ತಿದ್ದ ಅಪ್ಪ , ಇಂದು ಸುಮ್ಮನೇ ಕುಳಿತಿರುವುದೂ ಅಲ್ಲದೇ, ತಾನು ಮನೆಗೆ ಬಂದ ತಕ್ಷಣ, "ಆರೇ ಶಾಬಾಜ್, ಆಜ್ ಕೈಸಾ ರಹಾ ಇಸ್ಕೂಲ್, ಎಂದು ಕೇಳಿದ್ದನ್ನು ನೋಡಿ ಬಷೀರ್ ನ ಮಗನಿಗೆ ಸ್ವರ್ಗಕ್ಕೆ ಮೂರೇ ಗೇಣು ಎನ್ನುವಷ್ಟು ಖುಷಿ. ಅಚ್ಛಾ ಥಾ ಅಬ್ಬು ಎನ್ನುತ್ತಾ ಓಡಿ ಬಂದು ಅವನ ತೋಳ ತೆಕ್ಕೆ ಸೇರಿದ. ತನ್ನ ಒಂದು ಮಾತಿನಿಂದ ಮಗನಿಗೆ ಅಷ್ಟೊಂದು ಸಂತಸವಾಗಬಹುದೆಂದು ಎಣಿಸಿರದಿದ್ದ ಬಷೀರ್ ಕಣ್ಣಲ್ಲಿ ನೀರು ತುಂಬಿಕೊಂಡಿತು. ಅಬ್ಬಾಜಾನ್ ಆಪ್ ಆಜ್ ತಕ್ ಜೋ ಮೇರೇ ಸಪ್ನೆ ಮೇ ಆಕೆ ಬೋಲ್ತೇ ಥೇ ವೋ ಸಹೀ ಥಾ. ನಾನ್ ಇನ್ನುಮುಂದೆ ನನ್ನ ಹೆಂಡತಿ ಮಗನನ್ನು ಚನ್ನಾಗಿ ಇಟ್ಟುಕೊಳ್ಳುತ್ತೇನೆ. ನನ್ನ ಮಗ ತಪ್ಪು ಹಾದಿ ಹಿಡಿಯಲು ಬಿಡುವುದಿಲ್ಲ ಎಂದು ಗಟ್ಟಿಯಾಗಿಯೇ ಹೇಳಿದ. ಫರೀದಾ ಆ ಮಾತು ಕೇಳಿ ಮೊದಲ ಬಾರಿ ತನ್ನ ಮಾವನಿಗೆ ಮನಃ ಪೂರ್ವಕವಾಗಿ ವಂದಿಸುತ್ತಿದ್ದರೆ, ಶಾಬಾಜ್ ತನ್ನ ತಂದೆಯಲ್ಲಿ ಈ ಅಭೂತ ಪೂರ್ವ ಬದಲಾವಣೆ ಬರುವಂತೆ ಅಪ್ಪನ ಮನಸ್ಸನ್ನು ತಿದ್ದಿದ, ಅಪ್ಪನಿಗೆ ಇನ್ನಿಲ್ಲದಂತೆ ತಿಳಿಸಿ ಹೇಳಿ, ಬಹುಶಃ ಕನಸು ಬೀಳಲು ಪರೋಕ್ಷ ಕಾರಣರಾದ ತನ್ನ ಮೇಷ್ಟ್ರಿಗೆ ಹೇಗೆ ಕೃತಜ್ಞತೆ ಸಲ್ಲಿಸುವುದು ಎಂಬ ಚಿಂತೆಯಲ್ಲಿ ಮುಳುಗಿದ್ದ. 

Note: ಇದು ನನ್ನ ಮೊದಲ ಪ್ರಯತ್ನ. ಮನಸ್ಸಿನಲ್ಲಿ ಬಹಳ ಕಾಡಿಸುತ್ತಿದ್ದ ವಸ್ತುವನ್ನು ಕಥೆಯಾಗಿಸಲು ಪ್ರಯತ್ನಿಸಿದ್ದೇನೆ. ತುಂಬಾ ಬಾಲಿಶ ಎನಿಸಬಹುದೇನೋ, ಯಾವುದೇ ವ್ಯಕ್ತಿಗೆ ಅಥವಾ ಧರ್ಮಕ್ಕೆ ನೋವುಂಟು ಮಾಡುವ ಉದ್ದೇಶ ಖಂಡಿತ ಇಲ್ಲ.