Showing posts with label sumne kavanad thara. Show all posts
Showing posts with label sumne kavanad thara. Show all posts

Friday, 21 December 2018

ಯಾವುದು ಸತ್ಯ?

ಯಾವುದು ಸತ್ಯ?
ದಿನವೂ ನೋಡುವ ಅದೇ ನದಿ,
ಆದರೆ ನೆನ್ನೆಯಿದ್ದ ನೀರು ಇಂದಿಲ್ಲ,
ಇಂದಿರುವುದು ನಾಳೆ ಇರುವುದಿಲ್ಲ. 
ಹಾಗಾದರೆ ಹೆಸರಿಡುವುದು ನೀರಿನ ಹರಿವಿಗೋ?
ಅಥವಾ ಹರಿವ ಪಾತ್ರಕ್ಕೋ? ಯಾವುದು ನದಿ?
ಎಂದೋ ಯಾರೋ ಕಟ್ಟಿದ ಕಟ್ಟಡ,
ಕಟ್ಟಿದವನೊಬ್ಬ, ಕೆಡವಿ ಮತ್ತೆ ಕಟ್ಟಿದವನಿನ್ನೊಬ್ಬ,
ಅದು ನಮ್ಮದೆಂದು, ಇಲ್ಲ ನಮ್ಮದಾಗಿತ್ತೆಂದು
ಜನಾಂಗಗಳ ನಡುವೆ, ತಲೆಮಾರುಗಳವರೆಗೆ ಕಾದಾಟ!!
ಯಾರದಾದರೇನು, ನಮ್ಮದೆಂದು ಭಾವಿಸಿ ನಮಿಸಲಾಗದೇ?
ಹಾಗಾದರೆ ಪ್ರೀತಿ ಕಟ್ಟಡದ ಮೇಲೋ?ಅಥವಾ
ನಮ್ಮದನ್ನೇ ಸ್ಥಾಪಿಸಿದೆವೆಂಬ ಅಹಂಕಾರದ ಮೇಲೋ? ಯಾವುದು ಗುಡಿ?
ಪಾತ್ರಕ್ಕಷ್ಟೇ ಹೆಸರು. ಅಂತಃ ಸತ್ವಕ್ಕಲ್ಲ.
ಇಂದು ಶಾಂತಿ ಮಂತ್ರ ಸಾರಿ, ನಾಳೆ
ದೊಂಬಿ ಹಿಂಸೆ ಮಾಡಿದರೂ ಅವನ ಹೆಸರು ಒಂದೇ.
ಹೆಸರಿಡುವುದು ಅವನ ದೇಹಕ್ಕೆ, ಬದಲಾಗುತ್ತಿರುವ
ಅವನೊಳಗಿನ ಮನುಷ್ಯನಿಗಲ್ಲ.
ಕಾಣುವ ಪಾತ್ರ -ನದಿ!
ನೋಡಬಲ್ಲ ಕಟ್ಟಡ - ಗುಡಿ !
ಕಣ್ಣೆದುರಿರುವ ದೇಹವೇ - ಮನುಷ್ಯ!
ಹಾಗಿದ್ದರೆ ಯಾವುದು ಸತ್ಯ?

Thursday, 24 October 2013

ಲಹರಿ

ಸುಮ್ಮನೇ ಬಯಸಿದಾಕ್ಷಣ ದೊರೆಯಲು,
ಕವಿತ್ವವೇನು ಹಾದಿಬದಿಯ ತಿಂಡಿಯೇನು?

ಮನದ ದೆಣಪೆಯಲಿ ಚಿಮ್ಮಬೇಕು ಮೊದಲು,
ಭಾವಗಳ ಒರತೆ.
ಒತ್ತಿ ಬಂದ ಭಾವಬೀಜಗಳ,
ಮನದಂಗಳದಲಿ ಬಿತ್ತಿ,
ಅರಿವಿನ ಮಳೆಗರೆದು,
ಪದಗೊಂಚಲ ಗೊಬ್ಬರ ಹೂಡಿ,
ಬೆಳೆಸಬೇಕೊಂದು ಕವಿತೆಯ, ಅರೆರೆ!
ಇನ್ನೂ ಮುಗಿಯದಿದರ ಬೇಡಿಕೆ!
ಪ್ರಾಸಾನುಪ್ರಾಸಗಳ ಅಲಂಕಾರದ ಚಪ್ಪರ
ಆಸರೆಗಾಗಿ ಬೇಕಂತೆ, ಬಳುಕುವ ಬಳ್ಳಿ ಕವನಕ್ಕೆ!

ಇಷ್ಟೆಲ್ಲಾ ಬೆವರು ಸುರಿಸಿ, ಅಲ್ಲಲ್ಲ
ಪ್ರೀತಿ ಹರಿಸಿ, ಮನದಂಗಳದೊಳು ಜಾಗವಿತ್ತರೂ,
ಕವಿಗಳ ಕಷ್ಟ ತಪ್ಪದು.
ಬೆಳೆದ ಕವನ ಓದುವವನದಂತೆ!
ಹರಿಸಿದ ಪ್ರೀತಿ ಪಡೆದವನದಂತೆ!
ಕವಿಯೆನಿಸಿಕೊಂಡವ, ಭಾವಝರಿಯ ಹುಡುಕುತ್ತಾ,
ಮತ್ತೆ ಸುರಿಸಬೇಕು ಹನಿ ಹನಿ ಪ್ರೀತಿಯ,
ಬೆಳೆಸಬೇಕು ಮತ್ತೊಂದು ಕಾವ್ಯ ಹಂದರ.

ಸುಮ್ಮನೇ ಬರುವುದಿಲ್ಲ ಕವಿತ್ವ!
ಅದಕ್ಕೂ ಸಿದ್ಧಿಸಬೇಕು ಲೋಕಪ್ರೀತಿಯ ಋಷಿತ್ವ!

Monday, 23 July 2012

ಭದ್ರೆ...

ಇದ್ದಾಳೆ, ಇಲ್ಲಿವಳೊಬ್ಬಳು -

ಸದ್ದಿಲ್ಲದಂತೆ ತನ್ನ ಪಯಣ ಸಾಗಿಸುವ
ಮೌನಗೌರಿ !

ಆರ್ಭಟ ಹೆಚ್ಚೆಂದು ಶಪಿತಳಾಗಿ
ಮೂಲೆಗುಂಪಾದ ಪತಿತೆ? ಅಲ್ಲ ಪಾವನೆ.

ಕಡು ಕಾಡು-ಕಣಿವೆಗಳ ದಾಟಿ ಬಂದವಳು,
ಒಡಹುಟ್ಟಿದವಳಿಂದ ದೂರಾಗಿ,
ಕವಲು ದಾರಿಯ ಹಿಡಿದ ಏಕಾಂಗಿ.

ತನ್ನ ಸಣ್ಣ ಬಳುಕುವ ನಡು, ಒಡಲಾಳದ ಚೆಲುವಿಂದಲೇ
ಜಗವ ಸೆಳೆಯಬಲ್ಲ ಕೃಷ್ಣಸುಂದರಿ.

ಆದರೆ -
ಹಾದಿಯುದ್ದಕ್ಕೂ ಇವಳನ್ನು ದೋಚುವವರೇ!!
ನಿರ್ಮಲವಾದ ಇವಳನ್ನು ಹಾಳುಗೆಡವಿ ಬೀಗುವ
ಸಾಧಕರು!!!

ಇವಳು -
ಹಿಡಿದ ಹಾದಿಯೇ ತಪ್ಪಾಗಿರಲು ಯಾರನ್ನು ತಾನೇ
ಶಪಿಸುವಳು?
ಎಲ್ಲ ದೌರ್ಜನ್ಯ ಸಹಿಸುತ್ತ, ಅನ್ಯರ ಮನೆದೀಪ
ಬೆಳಗಿದಳು.

ಬಾಳಹಾದಿಯ ನಡುವೆ ಸೋತು ಮತ್ತೆ ತನ್ನಕ್ಕನ
ಮಡಿಲ ಸೇರಿದಳು.
ಒಂಟಿಪಯಣದ ಹಾದಿ ಮುಗಿಯಿತೆಂದು ಮನದ ಒಳಗೊಳಗೇ
ಹಿಗ್ಗಿ ಉಬ್ಬಿದಳು!

ನಂತರ -
ಸ್ವಂತಿಕೆಯೆ ಕಳೆದು ಹೊರಾಟವಳಿದು,
ತನ್ನ ಹೆಸರನ್ನೂ ಕಳೆದುಕೊಂಡ ನಿತ್ಯ ನಿರಂತರ ಅ'ಭದ್ರೆ' !!!


Wednesday, 2 May 2012

ಏನು ನೆನಪೆಂದರೆ?

ನೆನಪೆಂದರೆ ಸುತ್ತಣ 
ವಾಸ್ತವದಿಂದಾಚೆ ದಾಟಿ ನಡೆವ
ಬಾಲ್ಯದ ಎಳೆ ಬಿಸಿಲು..
ದಣಿದ ಮನಕೆ ತ೦ಪನ್ನೆರೆಯುವ
ಬಿದಿಗೆಯ ಚಂದ್ರನ ನೆಳಲು..

ದೂರ ತಾರಲೋಕದೊಳಗಿನಿಂದೆಲ್ಲೋ 
ಬಂದು ಮಿಂಚಿ ಮಾಯವಾದ ಉಲ್ಕೆ..
ವರ್ತಮಾನದ ಚಿಂತೆಯ ಸರಿಸಿ 
ನಲುಮೆಯುಕ್ಕಿಸುವ ಭಾವಗಳ ಕಾಣ್ಕೆ..

ಕಡಲಿನ ಅಲೆಗಳ ನಡುವೆ ತೇಲಿ 
ಬರುವ ನೌಕೆಯ ರೀತಿ 
ಮನಸಿನ ಪದರಗಳಾಳದಿಂದ ತೂರಿ
ಬರುವ ನಲ್ಮೆಯ ಪ್ರೀತಿ

ಒಮ್ಮೊಮ್ಮೆ ಮೃದು ಗಂಭೀರ,
ಪ್ರೀತಿ ತುಂಬಿದ ಝೇಂಕಾರ
ಮಗದೊಮ್ಮೆ ಘನಘೋರ, ಕಠಿಣತೆಯ 
ತೋರುವ ಹರಿಕಾರ 

ಸಿಹಿಕಹಿಯ ಮೆಲುಕು ಮಾಡುವವು ಮನವ ಹದ
ನೆನಸುವಾಗಲೂ ಬೇಕು ಆಯ್ಕೆ 
ಕಠಿಣತೆಯ ಸೂಸುತ್ತ, ಕಹಿ ನೆವವನ್ನೆ ಕೆದಕುತ್ತ 
ನಮ್ಮ ಅಹಮ್ಮನ್ನು ತಣಿಸಬೇಕೆ?

ಹೌದು, ಏನು... ನೆನಪೆಂದರೆ?
                                ನೆನಪಾಗುತ್ತಿಲ್ಲ!!!

Sunday, 26 February 2012

ಬ್ಲಾಗಿಂಗ್... ಕಾಲ... ಹೆಸರು...

ಗಣಕ ಯಂತ್ರದ ಮಣಿಗಳೊಡನೆ
ಅನುದಿನವೂ ಭಾವಯಾನ
ಹೆಸರೇ ತಿಳಿಯದ ಹೊಸಕವಿಗಳ
ಕವನ ಜಾತ್ರೆಯಲಿ
ಕಾಲನ ಚಲನೆಯ ಪರಿವೆಯೂ
ಆಗದಂತೆದುರುನಿಲ್ಲುವ ಈ ರಸ ನಿಮಿಷಗಳಿಗೆ ಏನು ಹೆಸರಿಡಲಿ?

ಕೇವಲ ಸಂತಸವೇ? - ಅಲ್ಲ
ಆತ್ಮತೃಪ್ತಿ - ಅದೂ ಅಲ್ಲ
ಅವೆಲ್ಲವನ್ನೂ ಮೀರಿದ ಮನಸ್ಸಿನಾಳಕ್ಕಿಳಿಯುವ
ಮಧುರಾನುಭೂತಿ.

ಅನುಭಾವ ಅನುಭೂತಿಗಳಿಗೂ ಹೆಸರಿಡುವುದಾದರೆ
ಈ ಮನೋಲ್ಲಾಸಕ್ಕೆನು ಹೆಸರು? - ಗೊಂದಲದಲ್ಲಿದ್ದೆ.

ಹೆಸರುಸಿರಿನ ಕೆಸರಿನಲ್ಲಿ ನೀನು ಕೊಸರಾಡುತ್ತಿರು
ಎಂದು ಸರಿದ ಕಾಲನು ಮಾತ್ರ ಕೀಲಿಮಣೆಗಳ ಲೆಕ್ಕಕ್ಕೆ
ಈ ಗಣಕದ ಗುಣಿತಕ್ಕೆ ದಕ್ಕಲೇ ಇಲ್ಲ!!!

Saturday, 27 August 2011

ಸ್ವಾನುಭವ - ನನ್ನ ಚುಟುಕ

ಛೆ! ನಾನು ಓದಿರುವುದು ಏನೂ ಸಾಲದು !
ನನ್ನ ಶಬ್ದ ಭಂಡಾರವೆಷ್ಟು ಚಿಕ್ಕದು !
ಹುಡುಕಿ ಹಿಡಿಯ ಹೋದಷ್ಟೂ ಪದವೇಕೆ ಕೈಗೆ ಸಿಕ್ಕದು?
ಕವಿತೆ ಬರೆಯ ಹೊರಟೊಡೆ ಎಲ್ಲರ ಕಾಡುವ ಭಾವವಿದು !!!??!!

(ಯಾರನ್ನ ಕಾಡುತ್ತೋ ಬಿಡುತ್ತೋ ನನ್ನನಂತೂ ಯಾವಾಗ್ಲೂ ಕಾಡ್ತಾ ಇರುತ್ತೆ, ಬರೆಯೋಕೆ ಕೂತ್ರೆ ಓದಿದ್ದೆಲ್ಲ ಮರತೇ ಹೋಗುತ್ತೆ, ಪದಗಳೇ ಸಿಗುಲ್ಲ).